Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಿಟ್ಟಿ ಹೊಸ ಸಿನ್ಮಾ ರಾಜಶೇಖರ್‌ನ ಮತ್ತೊಂದು ಮಾತು!
Posted date: 03 Fri, May 2013 – 02:07:09 PM

ಶ್ರೀನಗರ ಕಿಟ್ಟಿ ಈಗ ಫುಲ್ ಬ್ಯುಝಿಯಾಗಿದ್ದಾರೆ. ಒಂದರ ಮೇಲೊಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡಿರುವ ಕಿಟ್ಟಿ ಮೇಲೆ ಗಾಂಧಿನಗರಿಗರು ಸಿಕ್ಕಾಪಟ್ಟೆ ವಿಶ್ವಾಸವಿಟ್ಟುಕೊಂಡಿದ್ದಾರೆ. ಆ ಕಾರಣಕ್ಕೆ, ಕಿಟ್ಟಿ ಒಳ್ಳೆಯ ಬ್ಯಾನರ್‌ನಡಿ ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಕಿಟ್ಟಿ ಈಗ ಹೊಸದೊಂದು ಸಿನಿಮಾ ಒಪ್ಪಿಕೊಂಡಿರುವುದು ಲೇಟೆಸ್ಟ್ ನ್ಯೂಸು. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಕಿಟ್ಟಿ ನಟಿಸುತ್ತಿರುವ ಚಿತ್ರಕ್ಕೆ ರಾಜಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ‘ಈ ಸಂಭಾಷಣೆ’ ಚಿತ್ರ ನಿರ್ದೇಶಿಸಿದ್ದ ರಾಜಶೇಖರ್‌ಗೆ ಇದು ನಿರ್ದೇಶನದ ಎರಡನೇ ಚಿತ್ರ. ಮೊದಲ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದ ರಾಜಶೇಖರ್, ಅಲ್ಲಿ ಒಂದೆರೆಡು ಚಿತ್ರಗಳಿಗೆ ಸ್ಕ್ರಿಪ್ಟ್ ವರ್ಕ್ ಮುಗಿಸಿದ್ದಾರೆ. ಆ ಚಿತ್ರಗಳು ಸೆಟ್ಟೇರುವ ನಡುವೆ ಮತ್ತೊಂದು ಕನ್ನಡ ಸಿನಿಮಾ ನಿರ್ದೇಶಿಸುವ ಹುಮ್ಮಸ್ಸಿನಲ್ಲಿ ಕಿಟ್ಟಿ ಹಿಂದೆ ಹೊರಟಿದ್ದಾರೆ. 

ಇನ್ನು ಈ ಚಿತ್ರಕ್ಕೆ ಲಕ್ಷ್ಮಣ್‌ನಾಯಕ್ ಡಿ. ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲಕ್ಷ್ಮಣ್‌ನಾಯಕ್ ಅವರಿಗೆ ಇದು ನಿರ್ಮಾಣದ ಎರಡನೇ ಚಿತ್ರ. ಈ ಹಿಂದೆ ಇವರು ‘ಆಶಾಕಿರಣಗಳು’ ಎಂಬ ಮಕ್ಕಳ ಸಿನಿಮಾ ನಿರ್ಮಿಸಿದ್ದರು. ಈ ಚಿತ್ರ ಈಗಾಗಲೇ ಡೆಲ್ಲಿ, ಬೆಂಗಳೂರು ಮತ್ತು ಇತ್ತೀಚೆಗೆ ಜೈಪುರದಲ್ಲಿ ನಡೆದ ಫಿಲ್ಮ್‌ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಅದೇ ಉತ್ಸಾಹದಲ್ಲೀಗ ಅವರು ಕಿಟ್ಟಿ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಅಂದಹಾಗೆ, ಇದೊಂದು ಕಾದಂಬರಿ ಆಧಾರಿತ ಚಿತ್ರ ಅನ್ನೋದು ವಿಶೇಷ. ನಿರ್ಮಾಪಕ ಲಕ್ಷ್ಮಣ್ ನಾಯಕ್ ಡಿ ಅವರು ಬರೆದ ‘ಗುಡುಗು ಮಿಂಚಿನ ಮೋಡಗಳು’ ಕಾದಂಬರಿಯ ಎಳೆಯೊಂದನ್ನಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರಂತೆ ನಿರ್ದೇಶಕರು. ಕಥೆ ಮತ್ತು ಸಂಭಾಷಣೆ ಹಾಗೂ ಸಾಹಿತ್ಯವನ್ನು ಲಕ್ಷ್ಮಣ್‌ನಾಯಕ್ ಬರೆದಿದ್ದಾರೆ. 

ವಿಶೇಷವೆಂದರೆ ಈ ಚಿತ್ರಕ್ಕೆ ಮೊದಲ ಬಾರಿಗೆ ಮಿಸ್ ಸೌಥ್ ಇಂಡಿಯಾ ಆಗಿದ್ದ ನಿಖಿತಾ ನಾರಾಯಣ್ ಎಂಬ ಬೆಡಗಿ ನಾಯಕಿಯಾಗಿ ಕಾಲಿಡುತ್ತಿದ್ದಾಳೆ. ಮೂಲತಃ ಬೆಂಗಳೂರಿನ ಹುಡುಗಿ ನಿಖಿತಾ, ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾಳೆ. ಅಲ್ಲಿ ಐದು ಮತ್ತು ತಮಿಳಿನ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಿಖಿತಾಗೆ ಇದು ಕನ್ನಡದ ಮೊದಲ ಚಿತ್ರ. ಇನ್ನು, ಪ್ರಣೀತಾ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಾರಾಗಣದ ಆಯ್ಕೆ ಪ್ರಕ್ರಿಯೆ ಈಗಷ್ಟೇ ನಡೆಯುತ್ತಿದೆ.

ಚಿತ್ರಕ್ಕೆ ವಿ.ಮನೋಹರ್ ಅವರು ಸಂಗೀತ ನೀಡುತ್ತಿದ್ದಾರೆ. ‘ಲೂಸ್‌ಗಳು’ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಚಿದಾನಂದ್, ಈ ಚಿತ್ರಕ್ಕೂ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸುಮಾರು ೪೫ ದಿನಗಳ ಕಾಲ ಬೆಂಗಳೂರು ಹಾಗೂ ಇತರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಶ್ರೀನಗರ ಕಿಟ್ಟಿ ‘ಟೋನಿ’ ಮುಗಿಸಿದ್ದಾರೆ. ‘ಪಾರು ವೈಫ್ ಆಫ್ ದೇವದಾಸ್’ ಸಿನಿಮಾವನ್ನು ಅರ್ಧ ಮುಗಿಸಿದ್ದಾರೆ.  ‘ಬಹುಪರಾಕ್’ ಚಿತ್ರವೀಗ ಸೆಟ್ಟೇರಬೇಕಿದೆ. ಇದಾದ ಬಳಿಕ ಕಿಟ್ಟಿ ‘ಶಂಕ್ರ’ ಎಂಬ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿಟ್ಟಿ ಹೊಸ ಸಿನ್ಮಾ ರಾಜಶೇಖರ್‌ನ ಮತ್ತೊಂದು ಮಾತು! - Chitratara.com
Copyright 2009 chitratara.com Reproduction is forbidden unless authorized. All rights reserved.